ಶೃಂಗೇರಿಯಲ್ಲಿ ಮಯ್ಯ ``ಮಲೆನಾಡು ರಾಷ್ಟ್ರೀಯ ಉತ್ಸವ``
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 8 , 2015
|
ಮಯ್ಯ ಸಂಸ್ಥೆ ಪ್ರಾಯೋಜಕತ್ವದ 'ಮಲೆನಾಡು ರಾಷ್ಟ್ರೀಯ ಉತ್ಸವ ಜನವರಿ 14 ರಿಂದ 19, 2015ರ ತನಕ ಶೃಂಗೇರಿಯಲ್ಲಿ ನಡೆಯಲಿದೆ.
ಜ.14ರಿಂದ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 10.00 ರ ತನಕ ಸಂಗೀತ, ನಾಟ್ಯ, ಯಕ್ಷಗಾನ, ನಾಟಕ, ಪ್ರಶಸ್ತಿ ಪ್ರದಾನಗಳ ಸಂಗಮ ಕಾಣಬಹುದು.ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಕಲಾವಿದರ ಸಮ್ಮಿಲನವಾಗಲಿದೆ.
ಕಾರ್ಯಕ್ರಮದ ರುವಾರಿ ರಮೇಶ್ ಬೇಗಾರ್
ಕಾಳಿಂಗ ನಾವಡ ಪ್ರತಿಷ್ಥಾನ-ಶೃಂಗೇರಿಯ ಸಂಸ್ಥಾಪಕ, ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಆರ್ಯಭಟ ಪ್ರಶಸ್ತಿ ವಿಜೇತ ರಮೇಶ್ ಬೇಗಾರ್ ಶೃಂಗೇರಿಯರವರ ಸಾರಥ್ಯದ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಜಾನಪದ ಅಧ್ಯಯನ ಕೇಂದ್ರ (ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್) ಸಾದರಪಡಿಸುವ ‘ಮಯ್ಯ ಮಲೆನಾಡು ರಾಷ್ಟ್ರೀಯ ಉತ್ಸವ' ಇದೇ ಜನವರಿ 14 ರಿಂದ 19ವರೆಗೆ ಶೃಂಗೇರಿಯಲ್ಲಿ ನಡೆಯಲಿದೆ.
|
ರಮೇಶ್ ಬೇಗಾರ್
|
ತನ್ನ ನೈಸರ್ಗಿಕ ಸಂಪತ್ತು, ಜನರ ಹೃದಯ ಶ್ರೀಮಂತಿಕೆಯನ್ನು ಹೊತ್ತು ಶಾರದಾಂಬೆಯ ಪದತಲದಲ್ಲಿರುವ ಊರು ಶೃಂಗೇರಿ. ನೈಸರ್ಗಿಕ-ಕೃಷಿ ಸಂಬಂಧಿತ ತೊಂದರೆ-ಅನನುಕೂಲಗಳ ನಡುವೆಯೂ ಸದ್ದಿಲ್ಲದೇ, ಪ್ರಚಾರಕ್ಕೆ ಹಪಹಪಿಸದೆ, ಎಲ್ಲ ತೊಂದರೆ-ಅಡಚಣೆಗಳನ್ನು ಮೀರಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತನ್ನ ಕ್ರಿಯಾಶೀಲತೆಯಿಂದ, ಎಲ್ಲ ವಿದ್ಯೆ-ಕಲೆಗಳಿಗೆ ದೇವತೆಯಾದ ಶಾರದಾಂಬೆಯ ಸನ್ನಿಧಿಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಂಸ್ಕೃತಿಕ ಸಂಘಟನೆಯನ್ನು ಮಾಡುತ್ತಿರುವವರು ರಮೇಶ್ ಬೇಗಾರ್ ಶೃಂಗೇರಿ.
ಇವರ ಶ್ರೀ ಕಾಳಿಂಗ ನಾವಡ ಪ್ರತಿಷ್ಥಾನ, ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಜಾನಪದ ಅಧ್ಯಯನ ಕೇಂದ್ರ (ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್) ಮುಂತಾದ ಸಂಸ್ಥೆಗಳ ಮೂಲಕ ನಿರಂತರವಾಗಿ ಈ ಭಾಗದಲ್ಲಿ ಕಲಾಸೇವೆ ನಡೆಯುತ್ತಿದೆ.
2004ರಲ್ಲಿ ಪ್ರಾರಂಭವಾದ, ಈಗ ದಶಮಾನೋತ್ಸವ ಸಂಭ್ರಮದಲ್ಲಿರುವ ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್, ಮಲೆನಾಡಿನ, ಮಳೆಕಾಡಿನ, ಮಳೆಬಿಲ್ಲಿನ ನಡುವೆ ನಾಟಕ, ಸಂಗೀತ, ಯಕ್ಷಗಾನ, ಜಾನಪದ ಮುಂತಾದ ಕಲೆಗಳ ಮೂಲಕ ನಡೆಯುವ 'ಮಲೆನಾಡು ಉತ್ಸವ', ಕಲೆ-ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವತ್ತ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗಿದೆಯಲ್ಲದೆ, ಹೊರ ಪ್ರದೇಶಗಳ ಮತ್ತು ಹೊರ ರಾಜ್ಯಗಳ ಪ್ರತಿಭೆಗಳನ್ನು ಮಲೆನಾಡಿಗೆ ಪರಿಚಯಿಸುವ ಪ್ರಯತ್ನವಾಗಿದ್ದು, ಈ ಭಾಗದ ಜನರ ಸಾಂಸ್ಕೃತಿಕ ಜೀವ ನಾಡಿಯ ಜೀವಜಲವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಮುಂಗಾರಿನ ಹೆಜ್ಜೆಗೆ ಜೊತೆಯಾಗಿ, ಪ್ರತೀ ವರ್ಷ ರಾಜಧಾನಿ ಬೆಂಗಳೂರಿನಲ್ಲಿ ನಡೆಸುವ 'ಯಕ್ಷ ಮುಂಗಾರು' ಈ ಟ್ರಸ್ಟ್ ನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು.
- ಉಪಾಸನಾ ಮೋಹನ್ ತಂಡದಿಂದ ಸುಗಮ ಸಂಗೀತ
- ರಾಘವೇಂದ್ರ ಮಯ್ಯ ಅವರ ಭಾಗವತಿಕೆಯಲ್ಲಿ ಚಂದ್ರಹಾಸ ಯಕ್ಷಗಾನ
- ಜೆಸಿಬಿಎಂ ಕಾಲೇಜು, ಶೃಂಗೇರಿ ವಿದ್ಯಾರ್ಥಿಗಳಿಂದ ಓಡಿ ಹೋದ ಹುಡುಗಿ ನಾಟಕ
- ನಾದಬ್ರಹ್ಮ ತಂಡದಿಂದ ಪ್ರಹ್ಲಾದ ಚರಿತ ನೃತ್ಯ ರೂಪಕ
- ಕುಂದಾಪುರದ ಮೂರು ಮುತ್ತು ಕಲಾವಿದರಿಂದ 'ಸೂಸೈಡ್ ಸುಂದರ' ಹಾಸ್ಯ ನಾಟಕ
- ತೇಜಸ್ವಿ ಕಥಾನಕ ಆಧಾರಿಸಿದ 'ಗುಡುಗು ಹೇಳಿದ್ದೇನು' ನಾಟಕ
- ಕೊಪ್ಪ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ರೂಪಕ
ಕೃಪೆ :
http://www.kannada.oneindia.com
|
|
|